ಹೊಸದಿಗಂತ ಕಿರುತೆರೆ ಕಾಲಂ: ಭಾಗ 2: ಟಿ ಆರ್ ಪಿ ಗುಟ್ಟು-ರಟ್ಟು

November 27, 2011 - One Response

ಇಂದು ಚಾನಲ್ ಗಳಿಗೆ ಬೇಕಾಗಿರುವುದು ಟಿ ಆರ್ ಪಿ. ಅಂದರೆ ಒಂದು ಕಾರ್ಯಕ್ರಮವನ್ನು ಎಷ್ಟು ಮಂದಿ ನೋಡುತ್ತಿದ್ದಾರೆ ಎನ್ನುವ ಕುರಿತ ಮಾಹಿತಿ. ಇದರ ಮಾಹಿತಿಯನ್ನಾಧರಿಸಿ ವಿವಿಧ ಜಾಹೀರಾತುದಾರರ ದಂಡು ಕಾರ್ಯಕ್ರಮ ಅಥವಾ ಚಾನಲ್ ಗೆ ಬರುತ್ತದೆ.

ಹಾಗಿದ್ದರೆ ಈ ಟಿಆರ್ಪಿಯ ಗುಟ್ಟೇನು? ಅದು ಹೇಗೆ ಟಿ ಆರ್ಪಿ ತಿಳಿಯಬಹುದು? ಈ ಪ್ರಶ್ನೆ ಅಂತೂ ಪ್ರತಿಯೊಬ್ಬರ ಮನಸ್ಸನ್ನೂ ಒಮ್ಮೆಯಾದರೂ ಕಾಡಿರದೇ ಇರದು. ಯಾಕಂದರೆ ಟಿವಿ ವಾಹಿನಿಯಲ್ಲಿ ಕೆಲಸ ಮಾಡುವ ಕೆಲ ಮಂದಿಗೂ ಇದರ ಮರ್ಮದ ಅರಿವಿರುವುದಿಲ್ಲ. ನನ್ನನ್ನೂ ಬಹಳ ಮಂದಿ ಕೇಳಿರುವ ಕಾರಣ ಆ ಬಗ್ಗೆ ಸ್ವಲ್ಪ ಬರೆದರೆ ಸಹಾಯಕಾರಿ ಅನಿಸಿತು.
ಮುಂದಿನ ಕಂತಿನಿಂದ ಕಾರ್ಯಕ್ರಮ ಸಂಬಂಧೀ ವಿಶ್ಲೇಷಣೆಗಳನ್ನು ನೋಡುವ ಮೊದಲು ಆ ಕಾರ್ಯಕ್ರಮ ಜನರನ್ನು ತಲುಪಿದೆ ಎಂದು ಚಾನಲ್ನ ಮಂದಿ ತಿಳಿಯುವುದು ಹೇಗೆ ಅನ್ನುವುದಿಲ್ಲಿ ತಿಳಿಯೋಣ. ಒಂದು ಶೋ ತಯಾರಾಗಿ ಅದು ಮನೆ ಮನೆಗೆ ತಲುಪಿದರೆ ಮಾತ್ರವೇ ಅದನ್ನು ತಯಾರಿಸಲು ಖಚರ್ು ಮಾಡಿದ ಚಾನಲ್ ಅಥವಾ ಪ್ರೊಡಕ್ಷನ್ ಹೌಸ್ನ ಮಂದಿ ನೆಮ್ಮದಿಯಿಂದ ಬದುಕಲು ಸಾಧ್ಯ.
ಕರ್ನಾಟಕದ ಸುದ್ದಿಯಷ್ಟೇ ಹೇಳುವುದಾದರೆ, ಬೆಂಗಳೂರು ಹೊರತುಪಡಿಸಿ ಮಂಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಮುಂತಾದ ನಗರಗಳಲ್ಲಿ ಆಯ್ಕೆ ಮಾಡಿದ ಮನೆಗಳಲ್ಲಿ ಟಿಆರ್ಪಿ ಅಳೆಯುವ ಮಾಪಕಗಳನ್ನಿಡುತ್ತಾರೆ. ಇವುಗಳನ್ನು ಇನ್ಟ್ಯಾಮ್ ಅಂದರೆ ಇಂಡಿಯನ್ ಟೆಲೆವಿಜನ್ ಆಡಿಯೆನ್ಸ್ ಮೆಜರ್ಮೆಂಟ್ ಏಜೆನ್ಸಿ ಅಲ್ಲಿ ಅಳವಡಿಸಿರುತ್ತದೆ. ಈ ಮಾಪಕಗಳು ಚಾನಲ್ಗಳನ್ನು ಕಳುಹಿಸಿರುವ ಫ್ರೀಕ್ವೆನ್ಸಿಯನ್ನು ಲೆಕ್ಕ ಹಾಕುತ್ತವೆ ಮತ್ತು ಆ ಮನೆಗಳಲ್ಲಿ ಯಾವ ಫ್ರೀಕ್ವೆನ್ಸಿಯ ಚಾನಲ್ಗಳನ್ನು ವೀಕ್ಷಿಸಲಾಗುತ್ತದೆ ಅನ್ನುವ ಮಾಹಿತಿಯನ್ನು ಇದರಲ್ಲಿ ಕಲೆಹಾಕಲಾಗುತ್ತದೆ. ಆ ಮಾಹಿತಿಯನ್ನು ಪ್ರತಿ ಕ್ಷಣವೂ ಈ ಮಾಪಕ ದಾಖಲಿಸುತ್ತಿರುತ್ತದೆ. ಈ ದಾಖಲೆಯನ್ನು ಆಧರಿಸಿ ಪ್ರತಿ ವಾರಕ್ಕೊಮ್ಮೆಯಂತೆ ಇನ್ಟ್ಯಾಮ್ನ ಮಂದಿ ಚಾನಲ್ನ ಹೆಸರಿನ ಜೊತೆ ತಾಳೆ ಹಾಕುತ್ತಾರೆ ಮತ್ತು ಅವುಗಳ ಪ್ರಕಾರ ಯಾವ ಚಾನಲ್ನ ಯಾವ ಕಾರ್ಯಕ್ರಮ ಎಷ್ಟು ಹೊತ್ತು ವೀಕ್ಷಿಸಲ್ಪಟ್ಟಿದೆ ಅನ್ನುವುದು ತಿಳಿಯುತ್ತದೆ.
ಕಾರ್ಯಕ್ರಮಗಳು ಹೆಚ್ಚಾಗಿ ಅರ್ಧ ಗಂಟೆ ಅಥವಾ ಒಂದು ಗಂಟೆಯದಾಗಿರುತ್ತವೆ. ಅದನ್ನಾಧರಿಸಿ ಕಾರ್ಯಕ್ರಮದ ಟಿಆರ್ಪಿಯನ್ನು ಪಟ್ಟಿ ಮಾಡು ಅವುಗಳನ್ನು ಚಂದಾದಾರರಿಗೆ (ಟಿ ವಿ ಚಾನಲ್ಗಳು, ಜಾಹೀರಾತು ಏಜೆನ್ಸಿಗಳು, ಕಾರ್ಯಕ್ರಮ ವಿಶ್ಲೇಷಕರು) ಕಳುಹಿಸಿಕೊಡಲಾಗುತ್ತದೆ.
ಈ ವ್ಯವಸ್ಥೆ ಎಷ್ಟರಮಟ್ಟಿಗೆ ಸರಿ ಹಾಗೂ ವೈಜ್ಞಾನಿಕ ಅನ್ನುವ ಬಗ್ಗೆ ಯಾವತ್ತೂ ಪ್ರಶ್ನೆ ಇದ್ದೇ ಇದೆ. ಯಾಕಂದರೆ ಇಲ್ಲಿನ ಮಾಪಕಗಳನ್ನು ಎಲ್ಲಾ ವೀಕ್ಷಕರ ಮನೆಯಲ್ಲೂ ಅಳವಡಿಸುವುದು ಅಸಾಧ್ಯ, ಯಾಕಂದರೆ ಇವು ಬಹಳ ದುಬಾರಿ. ಇನ್ನೊಂದು ಹಾಗೆ ಮಾಡುವುದು ಸುಲಭದ ವಿಚಾರವೂ ಅಲ್ಲ. ಹಾಗೆಂದೇ ಕೇವಲ ಕೆಲವು ಸಾವಿರ ಮನೆಗಳ ವೀಕ್ಷಕರ ಪ್ರವೃತ್ತಿಯನ್ನಾಧರಿಸಿ ಇಡೀ ರಾಜ್ಯ ಅಥವಾ ದೇಶದ ವೀಕ್ಷಕರ ಪ್ರವೃತ್ತಿಯನ್ನಳೆಯುವುದು ಎಷ್ಟು ಸಮಂಜಸ ಅನ್ನುವವರೂ ಇದ್ದಾರೆ. ಆದರೆ ಜಾಹೀರಾತು ಕಂಪನಿಗಳು ಹೆಚ್ಚಾಗಿ ಎದನ್ನೇ ಅವಲಂಬಿಸಿರುವ ಕಾರಣ ಟಿ ವಿ ಚಾನಲ್ಗಳ ಮಂದಿ ಇದರ ಕುರಿತು ಹೆಚ್ಚು ಗಮನ ಕೊಡುತ್ತಾರೆ. ಇದಲ್ಲದೇ ಬೇರಿನ್ಯಾವ ರೀತಿಯಲ್ಲೂ ವೀಕ್ಷಕರ ಪ್ರವೃತ್ತಿಯನ್ನರಿಯುವುದು ಸಾಧ್ಯವಿಲ್ಲದಿರುವ ಕಾರಣವೂ ಇದು ಇನ್ನೂ ಚಾಲ್ತಿಯಲ್ಲಿದೆ.
ಆದರೆ ಡಿಟಿಎಚ್ನಲ್ಲಿ ವೀಕ್ಷಕರ ಮೇಲೆ ಚಾನಲ್ ಅಥವಾ ಡಿಟಿಎಚ್ನ ಮಂದಿಗೆ ಹೆಚ್ಚು ಹಿಡಿತ ಇರುವುದರಿಂದ ಯಾವ ಚಾನಲ್ ಅನ್ನು ಎಷ್ಟು ಹೊತ್ತು ವೀಕ್ಷಿಸಲಾಗುತ್ತಿದೆ ಅನ್ನುವುದನ್ನು ಅಳೆಯಬಹುದಾಗಿದೆ ಅನ್ನುವ ಮಾತಿದ್ದರೂ ಡಿಟಿಎಚ್ ಕೂಡ ಎಲ್ಲಾ ಮನೆಗಳಲ್ಲಿ ಲಭ್ಯ ಇಲ್ಲದಿರುವ ಕಾರಣ ಅದೂ ಕೂಡ ಪ್ರತಿಯೊಬ್ಬರ ಪ್ರವೃತ್ತಿಯನ್ನು ಹೇಳುವುದಿಲ್ಲ ಅನ್ನುವುದೂ ಸತ್ಯ. ಆದರೂ ಮುಂದಿನ ದಿನಗಳಲ್ಲಿ ಇಂಟರ್ನೆಟ್ ಟಿವಿಗಳು ಹೆಚ್ಚುಹೆಚ್ಚು ಬರುವುದು ಸಾದ್ಯವಿದೆ ಅಮೆರಿಕದಂತಹ ದೇಶಗಳಲ್ಲಿ ಇದು ಭಾರಿ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ಹಾಗಾಗಿ ಅದರ ಮೂಲಕ ವೀಕ್ಷಕರ ಮಾಪನವಾಗುವುದು ಸುಲಭವಾಗಲಿದೆ.
ಒಂದು ಕಾರ್ಯಕ್ರಮದ ಕುರಿತು ಈ ಟಿಆರ್ಪಿಯ ಮೂಲಕ ಅದನ್ನು ನೋಡುತ್ತಿರುವ ಮಂದಿ ಸಮಾಜದಲ್ಲಿ ಯಾವ ಸ್ತರದಲ್ಲಿದ್ದಾರೆ ಅನ್ನುವುದನ್ನು ಅಳೆಯಲಾಗುತ್ತದೆ. ಒಂದು ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೆ ಅದೇ ಚಾನಲ್ ಅನ್ನು ಎಷ್ಟು ಮಂದಿ ನೋಡಿದರು ಅನ್ನುವುದು ಕೂಡ ತಿಳಿಯುತ್ತದೆ. (ಟೈಂ ಸ್ಪೆಂಟ್) ಈ ಮೂಲಕ ಆ ಕಾರ್ಯಕ್ರಮದ ಯಾವ ಭಾಗ ಜನರಿಗೆ ಹೆಚ್ಚು ಇಷ್ಟವಾಗಿದೆ, ಯಾವ ಪಾತ್ರ ಯಾವ ಸಂದರ್ಭದಲ್ಲಿ ಬಂದಾಗ ಆ ಧಾರಾವಾಹಿಗೆ ಹೆಚ್ಚು ಮೆಚ್ಚುಗೆಯಾಗಿದೆ ಅನ್ನುವದಕ್ಕೆ ಅನುಗುಣವಾಗಿ ಕಾರ್ಯಕ್ರಮ ಅಥವಾ ಧಾರಾವಾಹಿಯ ರೂಪರೇಷೆಗಳನ್ನು ಬದಲಾಯಿಸಲಾಗುತ್ತದೆ ಅಥವಾ ಮುಂದುವರಿಸಲಾಗುತ್ತದೆ.
ಒಟ್ಟಿನಲ್ಲಿ ವೀಕ್ಷಕನಿಗೆ ಉತ್ತಮ ಮನರಂಜನೆಯನ್ನು ಉಣಬಡಿಸಿ ತಮ್ಮ ಬ್ಯಾಂಕ್ ಖಾತೆಗಳನ್ನು ತುಂಬಿಸುವ ಚಾನಲ್ ಮತ್ತು ಕಾರ್ಯಕ್ರಮ ನಿಮರ್ಾಪಕರ ದಂಡು ದಿನೇ ದಿನೇ ಹೆಚ್ಚುತ್ತಾ ಇದೆ. ಯಾಕಂದರೆ ಭಾರತದಲ್ಲಿ ಈಗಾಗಲೇ 500ರಷ್ಟು ಚಾನಲ್ಗಳಿದ್ದರೂ ಇನ್ನಷ್ಟು ಜಾಹೀರಾತುದಾರರಿಗೆ ಅವಕಾಶವಿದೆ. ವಾರ್ಷಿಕ 30 ಸಾವಿರ ಕೋಟಿಯಷ್ಟು ಜಾಹೀರಾತಿನ ಮೂಲಕ ಆದಾಯ ಬರುತ್ತಿದ್ದರೂ ಇನ್ನಷ್ಟು ಬೆಳವಣಿಗೆಗೆ ಅವಕಾಶ ಇರುವ ಕಾರಣ ಈ ಚಾನಲ್ಗಳಿಂದ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನಗಳು ನಡೆಯುತ್ತಲೇ ಇದೆ.
ಹೀಗೆ ಹಲವು ಸ್ತರಗಳಲ್ಲಿ ಈ ವಿಶ್ಲೇಷಣೆಗಳನ್ನು ಮಾಡಿ ಅದಕ್ಕೆ ತಕ್ಕದಾದ ಕಾರ್ಯಕ್ರಮಗಳನ್ನು ಮಾಡುವಲ್ಲಿ ನಮ್ಮ ಕನ್ನಡದ ಚಾನಲ್ಗಳೂ ಹಿಂದಿಲ್ಲ. ಅವುಗಳ ಕುರಿತೂ ಮುಂದಿನ ವಾರಗಳಲ್ಲಿ ತಿಳಿಯೋಣ. ಜೊತೆಗೆ ಕನ್ನಡದಲ್ಲಿ ಯಾವ ಕಾರ್ಯಕ್ರಮ ಹೆಚ್ಚು ವೀಕ್ಷಕರನ್ನು ಗಳಿಸಿದೆ, ಯಾವ ಚಾನಲ್ ಅತಿ ಹೆಚ್ಚು ವೀಕ್ಷಕರ ಬೆಂಬಲ ಹೊಂದಿದೆ ಅನ್ನುವ ಕುತೂಹಲಕ್ಕೂ ಬ್ರೇಕ್ ಬೀಳಲಿದೆ, ಮುಂದಿನ ವಾರ.
ಬಡೆಕ್ಕಿಲ ಪ್ರದೀಪ

ಹೊಸದಿಗಂತದಲ್ಲಿ ನನ್ನ ಕಿರುತೆರೆ ಕಾಲಂ

November 23, 2011 - 2 Responses

ನವೆಂಬರ್ 18, 2011

ಹೊಸದಿಗಂತ

‘ಸಿನಿದಿಗಂತ’

ಈ ಕಾಲಂನ ಹೆಸರು ಬದಲಾಗಲಿದೆ. ಆದರೆ ಈ ವಾರದಿಂದ ಪ್ರತಿ ವಾರ ಕಿರುತೆರೆಯ ಕಾರ್ಯಕ್ರಮಗಳ ಕುರಿತು ಅಂಕಣ ಬರೆಯಲಿದ್ದೇನೆ. ದಯವಿಟ್ಟು ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

ಮೀ ಮೀಡಿಯಾ… ಪತ್ರಿಕೆಗಳ ಪುಟಗಳಿಂದ…

November 18, 2011 - Leave a Response

ಬಹಳ ದಿನಗಳ ನಂತರ ಇಲ್ಲಿ ಭೇಟಿಯಾಗುತ್ತಿದೆ.

ಮೊದಲ ಚಿತ್ರ ಡಿಎನ್ಎ ಪತ್ರಿಕೆಯಲ್ಲಿ 17 ನವೆಂಬರ್ 2011ರಂದು ಪ್ರಕಟವಾದ ಚಿತ್ರ, ಎರಡನೆಯದು 24 10 2011ರಂದು ದೀಪಾವಳಿ ಕುರಿತು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ನನ್ನ ಸಂದರ್ಶನ.

ಈ ವಾರದ ನಂತರ ಪ್ರತಿ ಶುಕ್ರವಾರ ನನ್ನ ಕಿರುತೆರೆ ಕುರಿತ ಕಾಲಂ ಹೊಸ ದಿಗಂತದಲ್ಲಿ ಪ್ರಕಟವಾಗಲಿದೆ.

ಸ್ಟೀವ್ ಜಾಬ್ಸ್ ಎಂಬ ಐ ಮಹಾತ್ಮ

October 15, 2011 - Leave a Response

 

 

ತಂಗಿ

August 18, 2011 - Leave a Response

ನಿನ್ನೆ ಪೂರ್ತಿ ನಿನ್ನ ಕಾಡಿದೆ

ನಿನ್ನೆಯವರೆಗೆ ನಿನ್ನ ಕಾಡಿದ ಹಾಗೆ

 

ನಿನ್ನೆ ರಾತ್ರಿ ನಿನ್ನನ್ನೇ ನೆನೆದೆ

ನಿನ್ನೆಯವರೆಗೆ ನಿನ್ನ ನೆನೆದ ಹಾಗೆ

 

ಪ್ರಾಯ ಚಿಕ್ಕದು

ಪ್ರೀತಿ ದೊಡ್ಡದು

ನೀನು ನೀಡಿದ ಮಮತೆ ಮರೆಯದು

 

ತಂಗೀ ಅಂದರೆ ನೀನು ಒಬ್ಬಳೆ

ನನ್ನ ಪೂರ್ತಿ ಜನುಮಕೊಬ್ಬಳೆ

 

ಹುಸಿ ಮುನಿಸಲಿ ಮೂಗು ಮುರಿಯುವೆ

ಮರುಕ್ಷಣದಲೇ ಬಂದು ತಬ್ಬುವೆ

 

ನನಗೆ ಗೊತ್ತಿದೆ ನೀನು ಹೀಗೆಯೇ

ದೂರ ಹೋದರೂ ನನ್ನ ತಂಗಿಯೇ

 

ಮರೆವೆನೆಂದರೆ ಮರೆವೆ ಹೇಗೆ

ನೀನು ನೀಡಿದ ಪ್ರೀತಿ ನನಗೆ

ಇರುಳುರುಳು

June 24, 2011 - One Response

ಇರುಳು ಹಗಲಾದರೆ

ಹಗಲು ಇರುಳಾಗಬೇಕು

 

ಇರುಳು ಹಗಲುಗಳು

ಅದಲು ಬದಲಾದರೆ

ಮನುಜ ಮರುಳಾಗಬೇಕು

 

ಇರುಳ ನಿದಿರೆಗೆ ಉರುಳು

ಹಗಲ ಬದುಕಿಗೆ ನರಳು

 

ಹಗಲಿರುಳು ದುಡಿವವರು

ಇರುಳೇ ಹಗಲೆನ್ನುವವರು

ಇರುಳಿಗೇ ಹೆಗಲಾದವರು

 

ಹೊಳೆ

June 16, 2011 - 2 Responses

ಹೊಳೆ ಹೊಳೆಯುವುದಿಲ್ಲ

ಹೊಳೆಯುವುದು ಹೊಳೆಯಲ್ಲ

 

ಹೊಳೆಯುತ್ತ ಬಂದು ಹೋಗುವುದು ಒಂದು

ಹೊಳೆಯಂತೆ ಎಂದಿಗೂ ಹರಿಯುತ್ತಿರುವುದು

 

ಒಂದು ಕ್ಷಣಮಾತ್ರ

ಇನ್ನೊಂದು ನಿರಂತರ

 

ನಾವೂ ಇರಬೇಕು ಹೊಳೆಯ ಹಾಗೆ

ಆದರೆ, ಯಾವ ಹೊಳೆ?

ಅಡಿಗೆ

June 2, 2011 - Leave a Response

ಅಡಿಗೆ

ಅಡಿಗಡಿಗೆ

ಪದ ಮುಡಿಗೆ

ಮೆಲು ನಡಿಗೆ

ಎಳೆಯ ಕುಡಿಗೆ

ತೊದಲು ನುಡಿಗೆ

ಮನದ ತುಡಿಗೆ

ಗುಡಿ ಗುಡಿಗೆ

ನಾಡ ಗಡಿಗೆ

ಎಲ್ಲೇ ಹೋದರೂ ಕಡೆಗೆ

ಬೀಳಬೇಕು ನಿನ್ನ ಅಡಿಗೆ

ಐದು ವರ್ಷ-ಕ್ಷಣ ಕ್ಷಣವೂ ಹರ್ಷ

May 3, 2011 - 2 Responses

ನಾನು ಬೆಂಗಳೂರಿಗೆ ಬಂದು 5 ವರ್ಷವಾಗಿದೆ. ಅಂದ ಹಾಗೆ, ಬೆಂಗಳೂರಿಗೆ ಬರುವುದಕ್ಕೂ ನನ್ನ ವೃತ್ತಿಪರ ಬದುಕಿಗೂ ನೇರ ಸಂಬಂಧವಿದೆ. ಟಿವಿ9ನಲ್ಲಿ ವರದಿಗಾರನಾಗಿ ಸೇರುವುದಕ್ಕೇ ಬೆಂಗಳೂರಿಗೆ ಬಂದಿದ್ದೆ. ಮೇ 2, 2006. ನಿನ್ನೆಗೆ ಸರಿಯಾಗಿ ಐದು ವರ್ಷ ತುಂಬಿ ಇದೀಗ ನನ್ನ ವೃತ್ತಿ ಬದುಕಿನ ಪ್ರಥಮ ದಶಕದ ದ್ವಿತೀಯಾರ್ಧಕ್ಕೆ ಕಾಲಿಡುತ್ತಿದ್ದೇನೆ.

ಒಬ್ಬ ವರದಿಗಾರನಾಗಿ ಶುರುಮಾಡಿದ ನನ್ನ ವೃತ್ತಿ ಬದುಕು ನಂತರ ವಾರ್ತಾವಾಚನ, ಹಿನ್ನೆಲೆ ಧ್ವನಿ, ಒಂದೊಮ್ಮೆ ಛಾಯಾಗ್ರಹಣ, ಮುಂದೆ ವರ್ಲ್ಡ್ ಸ್ಪೇಸ್ ನಲ್ಲಿ ಆರ್ ಜೆಯಾಗಿ, ಬಿಗ್ ಎಫ್ ಎಂನಲ್ಲಿ ಸಹ ನಿರ್ಮಾಪಕನಾಗಿ ನಂತರ ಆಜ್ ತಕ್, ಹೆಡ್ ಲೈನ್ಸ್ ಟುಡೇಯಲ್ಲಿ ಬೆಂಗಳೂರಿನ ವರದಿಗಾರನಾಗಿ ಪ್ರತಿ ಬಾರಿಯೂ ಹೊಸ ತಿರುವು ಕಾಣುತ್ತಾ ಹೋಯಿತು, ಹೊಸ ರೂಪ ಪಡೆಯುತ್ತಾ ಹೋಯಿತು. ಬದಲಾವಣೆಯೊಂದೇ ಶಾಶ್ವತ ಅನ್ನುತ್ತಾರಲ್ಲ, ಹಾಗೆ, ನನ್ನ ವೃತ್ತಿ ಬದುಕಿನಲ್ಲಿ ಬದಲಾವಣೆಯೊಂದೇ ನಿತ್ಯನೂತನವಾಯಿತು. ಪ್ರತಿ ಬಾರಿಯೂ ಹೊಸತನ್ನು ಕಲಿಯುವ, ಹೊಸ ವ್ಯಕ್ತಿಗಳೊಂದಿಗೆ ದುಡಿಯುವ ಅವಕಾಶ ನನ್ನದಾಗುತ್ತಾ ಬಂದಿದೆ.

ಎರಡು ವರ್ಷ ಹಿಂದೆ ಸುವರ್ಣ ವಾಹಿನಿಯ ಪ್ರೋಮೋ ಮುಖ್ಯಸ್ಥ ಮತ್ತು ಹಿನ್ನೆಲೆ ಧ್ವನಿಯಾಗಿ ಸೇರಿದಾಗ ಇನ್ನೊಂದು ಬದಲಾವಣೆ. ಇದೀಗ ಅದೇ ಚಾನಲ್ ನ ಅಧಿಕೃತ ಹಿನ್ನೆಲೆ ಧ್ವನಿಯಾಗಿ ಫ್ರೀಲಾನ್ಸಿಂಗ್ ಮಾಡುತ್ತಿರುವುದು ಖುಷಿ ಕೊಡುತ್ತಿದೆ. ಚಾನಲ್ ಗೆ ಎಲ್ಲಾ ರೀತಿಯಲ್ಲೂ ಹೆಸರು ತಂದು ಕೊಡುತ್ತಿರುವ, ಪ್ಯಾಟೇ ಹುಡ್ಗೀರ್ ಹಳ್ಳೀ ಲೈಫು, ಹಳ್ಳೀ ಹೈದ ಪ್ಯಾಟೇಗ್ ಬಂದ, ಪ್ಯಾಟೇ ಮಂದಿ ಕಾಡೀಗ್ ಬಂದ್ರು, ಹೊಸ ಲವ್ ಸ್ಟೋರಿ, ಮತ್ತು ಇದೀಗ ಪ್ಯಾಟೇ ಹುಡ್ಗೀರ್ ಹಳ್ಳೀ ಲೈಫು ಸೀಜನ್-2, ಈ ಎಲ್ಲಾ ಶೋಗಳ ಅಧಿಕೃತ ಹಿನ್ನೆಲೆ ಧ್ವನಿಯಾಗಿ, ಶೋನ ಸಹ ಸಾರಥಿಯ ಪಾತ್ರದಲ್ಲಿ ನಡೆಯುತ್ತಿರುವ ಸಂತೋಷ ಅಷ್ಟಿಷ್ಟಲ್ಲ.

ನಿಮ್ಮಲ್ಲಿ ಹಲವು ಮಂದಿ ಈ ಶೋಗಳನ್ನು ನೋಡಿದ್ದರೂ ಆ ಧ್ವನಿ ನನ್ನದೆನ್ನುವುದು ಗೊತ್ತಿರಲಿಕ್ಕಿಲ್ಲವಾದ್ದರಿಂದ ಈ ಮೂಲಕ ಹೇಳಬೇಕಾಗಿ ಬಂದಿದೆ. ಅದೇನೇ ಇರಲಿ, ನಾನಲ್ಲದಿದ್ದರೂ ನನ್ನ ಧ್ವನಿ ಎಲ್ಲೆಡೆ ಚಿರಪರಿಚಿತವಾಗಿದೆ ಅನ್ನುವುದಕ್ಕೆ ಆಗಾಗ ಬರುವ ಕರೆಗಳು, ಎಸ್ಸೆಮೆಸ್ ಗಳು, ಪತ್ರಗಳು, ಅಥವಾ ನೇರವಾಗಿ ಸಿಕ್ಕು ಅಭಿನಂದಿಸುವ ವೀಕ್ಷಕರೇ ಸಾಕ್ಷಿ.

ಸುವರ್ಣದ ಅಡಿಬರಹ- ಹೊಸತನ ಪ್ರತಿಕ್ಷಣ ನನ್ನ ಲೇಖನಿಯಿಂದ ಬಂದ ಸಾಲು, ಪ್ಯಾಟೇ ಹುಡ್ಗೀರ್ ಹಳ್ಳೀ ಲೈಫು, ನಾನು ಕೊಟ್ಟಿದ್ದ ಸಿಟೀ ಹುಡ್ಗೀರ್ ಹಳ್ಳೀ ಲೈಫಿನ ಬಹುಪಾಲನ್ನು ಉಳಿಸಿಕೊಂಡಿದೆ. ಹೀಗೇ ಇನ್ನೂ ಹಲವು ಸಾಲುಗಳು, ಹೆಸರುಗಳು, ಆದರೆ ಇವೆರಡು ಮೈಲ್ ಸ್ಟೋನ್ ಗಳು.

ಅಂದಹಾಗೆ, ಈ ನನ್ನ ಪಯಣದಲ್ಲಿ ಎಷ್ಟೊಂದು ಏರುಪೇರುಗಳು, ಇದಕ್ಕೆಲ್ಲಾ ಬೆನ್ನೆಲುಬಾಗಿ ನಿಂತು ನನ್ನ ಪಯಣವನ್ನು ಸುಖಕರವಾಗಿ ಮಾಡಿದ ಅದೆಷ್ಟೋ ಮಂದಿ, ಕೆಲವರು ಹೊಸತಾಗಿ ಗೆಳೆಯರಾಗಿದ್ದಾರೆ, ಕೆಲವರು ಹೀಗೇ ಸಿಕ್ಕವರು ಜೊತೆಯಾಗಿದ್ದಾರೆ, ಕೆಲವು ಮಂದಿ ಬಾಲ್ಯದಿಂದ ಬಂಬಲವಾಗಿದ್ದಾರೆ. ಏನೇ ಆದರೂ ಎಲ್ಲರೂ ನನ್ನೀ ಪಯಣಕ್ಕೆ ಆಧಾರವಾಗಿದ್ದಾರೆ.

ಇದೀಗ ಕಳೆದ ಐದು ವರ್ಷಗಳೂ ಮಾಡಿರದ ಹೊಸತೊಂದು ಕೆಲಸ ಮಾಡುವ ಅವಕಾಶ ನನ್ನದಾಗಿದೆ. ನಿನ್ನೆಯಿಂದ ಸುವರ್ಣ ವಾಹಿನಿಯಲ್ಲಿ ಆರಂಭವಾಗಿರುವ ಹೊಸ ಧಾರವಾಹಿ ಕೃಷ್ಣ ರುಕ್ಮಿಣಿಯಲ್ಲಿ ಆಕ್ಟಿಂಗ್ ಮಾಡುವ ಮೂಲಕ ನಟನಾ ವೃತ್ತಿಯಲ್ಲಿ ಹೊಸ ಹೆಜ್ಜೆ ಇಟ್ಟಿದ್ದೇನೆ. ಧಾರಾವಾಹಿ ವೀಕ್ಷಿಸಿ, ಪ್ಯಾಟೇ ಹುಡ್ಗೀರ್ ಹಳ್ಳೀ ಲೈಫು ನೋಡಿ.

ನಾಳೆ

April 10, 2011 - 2 Responses

ನಾಳೆ ಅನ್ನೋದು

ಇಂದಿಗಿಂತ ಚೆನ್ನ

ನಿನ್ನೆಗಿಂತ ಭಿನ್ನ

ಮೊನ್ನೆಗಿಂತಲೂ ವಿಭಿನ್ನ

 

ನಾಳೆ ಅನ್ನೋದು

ಸಿಕ್ಕಿದ್ದಕ್ಕಿಂತ ಹೆಚ್ಚು

ಕೇಳಿದ್ದಕ್ಕಿಂತ ಜಾಸ್ತಿ

ಪ್ರಾಪ್ತಿಗಿಂತ ಮಿಗಿಲು

 

ನಾಳೆ ಅನ್ನೋದು

ಮಾತಿಗೆ ಸಿಗದು

ನಗದಿಗೆ ನಗದು

ಅಳುವಿಗೆ ಅಳುಕದು

 

ನಾಳೆ ಅನ್ನೋದು

ಹಾಗೆ ಸ್ವಲ್ಪ

ಖಾರ ಜಾಸ್ತಿ

ಉಪ್ಪು ಹೆಚ್ಚು

ಸಿಹಿಗೂ ಮಿಗಿಲಾದ್ದು

 

ನಾಳೆ ಅನ್ನೋದು

ಇದುವರೆಗೂ ಊಹಿಸಿರದ

ಊಹಿಸಿದರೆ ಸತ್ಯವಾಗದ

ಸತ್ಯಗಳಿಗೇ ಸವಾಲು

 

ನಾಳೆ ಅನ್ನೋದು

ಸ್ವಲ್ಪ ಹಾಗೆನೆ

ನಮಗ್ಗೊತ್ತಿಲ್ಲ

ಗೊತ್ತಿದ್ದಂತಿರಲ್ಲ

 

ನಾಳೆ ಅನ್ನೋದು

ನಾಳೆಗಿಂತ ಮುನ್ನ

ತಿಳಿಯಲು ಬರುವುದಿಲ್ಲ!

Follow

Get every new post delivered to your Inbox.